ಕಾಶ್ಮೀರ್ ಸಿಂಗ್ (ಜನನ ೧೯೪೧) ಒಬ್ಬ ಮಾಜಿ ಭಾರತೀಯ ಗೂಢಚಾರ. ಪರ್ವೇಜ್ ಮುಷರಫ್ ಅವರ ಅಧ್ಯಕ್ಷೀಯ ಕ್ಷಮಾದಾನದೊಂದಿಗೆ ಬಿಡುಗಡೆಯಾಗುವ ಮೊದಲು ಇವರು ಪಾಕಿಸ್ತಾನದ ಜೈಲುಗಳಲ್ಲಿ ೩೫ ವರ್ಷಗಳನ್ನು ಕಳೆದರು. == ಆರಂಭಿಕ ಜೀವನ == ಅವರ ಆರಂಭಿಕ ಜೀವನದಲ್ಲಿ, ಅವರು ಸರಿಸುಮಾರು ೧೯೬೨ ರಿಂದ ೧೯೬೬ ರವರೆಗೆ ಭಾರತೀಯ ಸೇನೆಯಲ್ಲಿದ್ದರು. ನಂತರ ಪಂಜಾಬ್ ಪೋಲಿಸ್ ಪಡೆಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ನಂತರ, ಅವರು ತಿಂಗಳಿಗೆ ೪೦೦ ರೂ.ಗಳ ದರದಲ್ಲಿ ಗುತ್ತಿಗೆ ಆಧಾರದ ಮೇಲೆ ಬೇಹುಗಾರಿಕೆಯನ್ನು ಕೈಗೊಂಡರು. ನಂತರ ಇಬ್ರಾಹಿಂ ಎಂಬ ಮುಸ್ಲಿಂ ಹೆಸರಿನಲ್ಲಿ ಪಾಕಿಸ್ತಾನಕ್ಕೆ ಪ್ರವೇಶಿಸಿದರು. ಈ ಹೆಸರನ್ನು ಬಳಸಿಕೊಂಡು ಅವರು ಹೋಟೇಲ್‍ಗಳಲ್ಲಿ ಉಳಿದುಕೊಂಡರು ಹಾಗೂ ತಮ್ಮ ಕಾರ್ಯಕ್ಕೆ ಅವಶ್ಯಕವಾದ ಗುರುತಿನ ಚೀಟಿಗಳನ್ನು ಪಡೆದರು. == ಬಂಧನ == ೧೯೭೩ ರಲ್ಲಿ, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಅವರನ್ನು ೨೨ ನೇ ಮೈಲಿಗಲ್ಲಿನ ಪೇಶಾವರ - ರಾವಲ್‍ಪಿಂಡಿ ರಸ್ತೆಯಲ್ಲಿ ಬಂಧಿಸಿದರು. ಬಂಧನದ ನಂತರ, ಅವರ ಮೇಲೆ ಗೂಢಚರ್ಯೆ ಮತ್ತು ಕಳ್ಳಸಾಗಣೆಯ ಆರೋಪವನ್ನು ಹೊರಿಸಲಾಯಿತು ಆದರೆ ಅದನ್ನು ಅಧಿಕಾರಿಗಳಿಗೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಬಂಧನದ ಸಮಯದಲ್ಲಿ ಕಾಶ್ಮೀರ ಸಿಂಗ್, ಪತ್ನಿ ಪರಮಜಿತ್ ಕೌರ್ ಮತ್ತು ೧೦ ವರ್ಷದೊಳಗಿನ ಮೂರು ಮಕ್ಕಳನ್ನು ಹೊಂದಿದ್ದರು. ತರುವಾಯ ಅದೇ ವರ್ಷದಲ್ಲಿ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತು. ಈ ತೀರ್ಪನ್ನು ೧೯೭೬ ಮತ್ತು ೧೯೭೭ ರ ನಡುವೆ ಸಿವಿಲ್ ನ್ಯಾಯಾಲಯವು ಎತ್ತಿಹಿಡಿದಿತು ಮತ್ತು ನಂತರ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲಾಯಿತು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸಿಂಗ್ ಅವರು ಅನಿರ್ದಿಷ್ಟಾವಧಿಯ ಜೈಲು ಶಿಕ್ಷೆಗೆ ಗುರಿಯಾದರು. ಮೊದಲ ಕೆಲವು ತಿಂಗಳುಗಳ ಕಾಲ ಅಧಿಕಾರಿಗಳಿಂದ ಮೂರನೇ ದರ್ಜೆಯ ಕಿರುಕುಳವನ್ನು ಅನುಭವಿಸಿದರು. ಅಧಿಕಾರಿಗಳು ಭಾರತದ ಗೂಢಚಾರ ಎಂದು ಒಪ್ಪಿಕೊಳ್ಳುವಂತೆ ಅವರ ಮೇಲೆ ಒತ್ತಡ ಹೇರಿದರು. ಸಿಂಗ್ ಅವರನ್ನು ೧೭ ವರ್ಷಗಳ ಕಾಲ ಪಾಕಿಸ್ತಾನದ ಏಳು ವಿಭಿನ್ನ ಜೈಲುಗಳಲ್ಲಿ ಸರಪಳಿಯನ್ನು ಬಿಗಿದು ಏಕಾಂತದಲ್ಲಿರಿಸಲಾಗಿತ್ತು. ಸೆರೆಯಲ್ಲಿದ್ದ ಒಟ್ಟು ಮೂರೂವರೆ ದಶಕಗಳ ಅವಧಿಯಲ್ಲಿ, ಅವರು ಆಕಾಶವನ್ನು ನೋಡಲಿಲ್ಲ ಅಥವಾ ಒಬ್ಬ ಸಂದರ್ಶಕನನ್ನು ಹೊಂದಿರಲಿಲ್ಲ. ಸಿಂಗ್ ಅವರ ಪತ್ನಿ ಅವರು ಮರಳುವ ಭರವಸೆಯನ್ನು ಕಳೆದುಕೊಂಡಿದ್ದರು. ೧೯೮೬ ರಲ್ಲಿ, ಪಾಕಿಸ್ತಾನ ಸರ್ಕಾರವು ಲಾಹೋರ್ ಜೈಲಿನಿಂದ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಕೆಲವು ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದಾಗ ಅವರು ಜೀವಂತವಾಗಿದ್ದರೆಂದು ಅವರ ಕುಟುಂಬದವರಿಗೆ ತಿಳಿಯಿತು. ಆದರೆ ಸಿಂಗ್‍ರವರಿಗೆ ಅದಾಗಲೇ ಮರಣದಂಡನೆ ವಿಧಿಸಲಾಗಿತ್ತು. == ಬಿಡುಗಡೆ == ೨೦೦೮ ರಲ್ಲಿ ಮಾನವ ಹಕ್ಕುಗಳ ಸಚಿವ ಅನ್ಸಾರ್ ಬರ್ನಿ ಲಾಹೋರ್ ಜೈಲಿಗೆ ಭೇಟಿ ನೀಡಿದ್ದಾಗ ಅವರನ್ನು ಗುರುತಿಸಿದ್ದರು. ಆದರೆ ದೀರ್ಘಾವಧಿಯ ಜೈಲಿನ ವಾಸದ ನಂತರ ಸಿಂಗ್‍ರವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಬರ್ನಿಯವರು ಹೇಳಿದ್ದರು. ಬರ್ನಿಯವರು ತಕ್ಷಣವೇ ಪಾಕಿಸ್ತಾನ ಸರ್ಕಾರದೊಂದಿಗೆ ಸಿಂಗ್ ಅವರ ಬಿಡುಗಡೆಯನ್ನು ಕೋರಿ ತಮ್ಮ ವಾದವನ್ನು ಮಂಡಿಸಿದರು. ಸಿಂಗ್ ಅವರು ೩೫ ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರಿಂದ ಮಾನವೀಯ ನೆಲೆಯಲ್ಲಿ ತಮ್ಮ ಪ್ರಕರಣದ ವಿರುದ್ಧ ಹೋರಾಡಿದ್ದೇನೆ ಎಂದು ಅವರು ಹೇಳಿದರು. ಇದನ್ನು ತಿಳಿದ ಪಾಕಿಸ್ತಾನದ ಅಧ್ಯಕ್ಷ, ಪರ್ವೇಜ್ ಮುಷರಫ್ ಆಘಾತ ಮತ್ತು ಅಪನಂಬಿಕೆಯನ್ನು ವ್ಯಕ್ತಪಡಿಸಿದರು ಮತ್ತು ಕ್ಷಮಾದಾನ ಅರ್ಜಿಯನ್ನು ಸ್ವೀಕರಿಸಿ ಸಿಂಗ್ ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಲು ಆದೇಶಿಸಿದರು. ೪ ಮಾರ್ಚ್ ೨೦೦೮ ರಂದು, ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿತು ಮತ್ತು ಸಂಭ್ರಮಾಚರಣೆಯೊಂದಿಗೆ ವಾಘಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿತು. == ಇವನ್ನೂ ನೋಡಿ == ರವೀಂದ್ರ ಕೌಶಿಕ್ == ಉಲ್ಲೇಖಗಳು ==